ಮಾದ್ರಿ

ಪಾಂಡು ಮಹಾರಾಜನ ಎರಡನೆಯ ಹೆಂಡತಿ. ಈಕೆ ಮುದ್ರ ದೇಶದ ರಾಜ ಋತಾಯನ ಎಂಬಾತನ ಮಗಳು. ಶಲ್ಯನ ಸಹೋದರಿ. ಈಕೆ ಧೈರ್ಯಾಭಿಮಾನಿ ದೇವತೆಯಾದ ಧೃತಿಯ ಅಂಶದಿಂದ ಹುಟ್ಟಿದವಳು. ಪಾಂಡುವಿನ ಸೂಚನೆಯಂತೆ ಕುಂತಿದೇವಿಯ ಮೂಲಕ ಮಂತ್ರವನ್ನು ಗ್ರಹಿಸಿ ಅಶ್ವಿನಿದೇವತೆಗಳ ಅನುಗ್ರಹ ಪಡೆದು ನಕುಲ, ಸಹದೇವರನ್ನು ಪಡೆದಳು. ಈಕೆಯೊಂದಿಗೆ ಕೂಡಲಾಗಿ ಪಾಂಡುರಾಜ ಮಡಿದ. ಆಗ ಮಾದ್ರಿ ಕುಂತಿಯ ಅಪ್ಪಣೆ ಪಡೆದು ತನ್ನ ಮಕ್ಕಳನ್ನು ಆಕೆಗೊಪ್ಪಿಸಿ ಸಹಗಮನ ಮಾಡಿದಳು. ಈ ವೃತ್ತಾಂತ ಮಹಾಭಾರತದಿಂದ ತಿಳಿದುಬರುತ್ತದೆ.
		 (ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ